Description
‘ಶಿವ’ ಸನಾತನೀಯರ ಆಪ್ತದೇವರು. ಕರುಣಾಮಯಿ, ಮಹಾತತ್ತ್ವ, ಮಹಾಶಕ್ತಿ. ಜನಜೀವನದ ಪ್ರತೀಕದಂತೆ ಇರುವ ಜಗಜ್ಜನಕ, ಜಗನ್ನಿಯಾಮಕ. ತ್ರಿಮೂರ್ತಿ ತತ್ತ್ವದಲ್ಲಿ ಲಯತತ್ತ್ವದ ಒಡೆಯ.
ಶಿವತತ್ತ್ವದಲ್ಲಿ ಸರಳತೆ ಇದೆ, ಆದರೆ ಸುಲಭವಲ್ಲ. ಅದರ ಅನುಸಂಧಾನಕ್ಕೆ ಬೇಕಾದುದು ನಿರ್ಮಲತೆ. ಮುಕ್ಕಣ್ಣನ ಅರಿಯಲು ಒಳಗಣ್ಣರಾಗಬೇಕು. ಅಭಿಷೇಕವೇ ಸಾಕು ಅವನ ಅನುಗ್ರಹಕ್ಕೆ. ಭಸ್ಮವೇ ಸಾಕು ಅಲಂಕಾರಕ್ಕೆ. ಹೀಗಿದ್ದೂ ದುರ್ಭಾವಗಳು ಭಸ್ಮವಾಗದೆ, ಲೋಭ ಮೋಹಗಳು ಲಯವಾಗದೆ, ಶಿವನೊಲುಮೆ ಸಾಧ್ಯವಿಲ್ಲ.
ಜ್ಞಾನಿಗಳು ನಮಗೆ ಅನುಗ್ರಹಿಸಿದ ರುದ್ರಯಾಮಳದಲ್ಲಿ ಆಗಮ, ನಿಗಮ ಹಾಗೂ ತಂತ್ರಗಳ ಅಪೂರ್ವ ಸಮನ್ವಯದ ಮಹತ್ತಿದೆ, ಪರಮಾನಂದದ ಅನುಭೂತಿಗೆ ಬೇಕಾದ ಮಾರ್ಗದರ್ಶನವಿದೆ. ಪ್ರಕೃತ ರುದ್ರಯಾಮಳವನ್ನು ಆಧರಿಸಿದ ಈ ಶಿವದರ್ಶನ ಗ್ರಂಥವು ಈ ಎಲ್ಲವನ್ನೂ ಧೇನಿಸುತ್ತದೆ.
ಇಂತಹ ಪರಮ ಮಂಗಲಕರವೂ, ಶುಭಂಕರವೂ ಆದ ಕೃತಿಯನ್ನು ಭಾರತ ವರ್ಷದ ಹಿರಿಯ ಬಹುಭಾಷಾ ವಿದ್ವಾಂಸರಾದ ವಿಷ್ಣು ಡೋಂಗ್ರೆಯವರು ಮನೋಜ್ಞವಾಗಿ ವಿರಚಿಸಿದ್ದಾರೆ. ಬಹುಶ್ರುತ ವಿದ್ವಾಂಸರಾದ ಡೋಂಗ್ರೆಯವರು ಪುರಾಣೇತಿಹಾಸ, ವೇದ ಶಾಸ್ತ್ರಗಳಲ್ಲಿ ಗತಿಶೀಲರು ಹಾಗೂ ಅವುಗಳ ಮರ್ಮವನ್ನು ಎಳೆಎಳೆಯಾಗಿ ಬಿಡಿಸಿ, ನವನವೀನ ಹೊಳಹುಗಳೊಂದಿಗೆ ವಿವರಿಸಬಲ್ಲ ಸಂಶೋಧಕರು. ಅವರ ವಿಶೇಷ ತಪಸ್ಸಿನಿಂದ ಮೂಡಿ ಬಂದ ಈ ಕೃತಿ ಅಮೂಲ್ಯವಾದ್ದರಿಂದ ಸಂಗ್ರಹಯೋಗ್ಯ. ಮನ ಮನದ ಮನೆ ಮನೆಯ ಭಾವಶುಧ್ಧತೆಗೆ ಇದು ಅತ್ಯಗತ್ಯ. ಇದು ನಿತ್ಯ ವ್ಯಾಸಂಗದ ಆಕರ ಗ್ರಂಥವೇ ಸರಿ.
ಭದ್ರಮ್ ಶಿವಮ್ ಮಂಗಲಮ್
– ಮೋಹನ ಭಾಸ್ಕರ ಹೆಗಡೆ






Reviews
There are no reviews yet.